1700

ಮುಗ್ದ

  • By Vinay MT
  • Tuesday, February 9th, 2016
  • Ankanagalu

ಬಿಸಿಲಿನ ಬೇಗೆಗೆ ಬೆಂದುಬಸವಳಿದಿದ್ದ ಬೆಂಗಳೂರಿಗೆ ಅಕಾಲದಲ್ಲಿ ಹಿಂದಿನ ರಾತ್ರಿ ಸುರಿದ ಸೋನೆ ಮಳೆ ಕೊಂಚ ನೆಮ್ಮದಿ ತಂದಿತ್ತು. ಆ ದಿನದ ಮುಂಜಾವು ಆಹ್ಲಾದಕರವಾಗಿತ್ತು.
ಎಂದಿನಂತೆ ಮನೆಯ ಕೆಲಸ ಕಾರ್ಯಗಳನೆಲ್ಲ ಸಮಾಪ್ತಿಗೊಳಿಸಿ ಗೃಹಿಣಿ ಅನುಪಮ ತನ್ನ ವೃತ್ತಿಗಾಗಿ ಎಲೆಕ್ಟ್ರಾನಿಕ್ ಸಿಟೀ ತಲುಪಲು ಮೆಜಸ್ಟಿಕ್‌ನಲ್ಲಿ ಎರಡನೇ ಬಸ್ಸಿಗಾಗಿ ಕಾಯುತ್ತಿದ್ದಳು.
ಅಚಾನಕ್ಕಾಗಿ ಅಂದು ಪ್ರೌಢ ಶಾಲೆಯಲ್ಲಿ ಜೊತೆಗೆ ಓದಿದ್ದ ಗೌರಿಯನ್ನು ಬಹಳ ವರ್ಷಗಳ ನಂತರ ಎದುರುಗೊಂಡಳು.

“ಹೇ!!! ನೀನು ಗೌರಿ ಅಲ್ವಾ … ನನ್ನ ಗುರುತು ಸಿಕ್ಕಿತಾ? ನಾನು ಅನು… ಹೇಗಿದಿಯಾ… ನೀನನ್ನು ನೋಡಿ ತುಂಬಾ ಸಂತೋಷವಾಯಿತು… ಎಲ್ಲಿದಿಯ, ಏನು ಮಾಡ್ಕೊಂಡಿದೀಯ…ಬೆಳ್ಳಿಗ್ಗೆ ಇಷ್ಟು ಬೇಗ ಎಲ್ಲಿಗೆ ಹೊರಟಿರುವೆ…” ಎಂದು ತನೆಲ್ಲ ಪ್ರಶ್ನೆಗಳನ್ನು ಒಂದರ ಮೇಲೊಂದರಂತೆ ತನ್ನ ಗೆಳತಿ ಗೌರಿಗೆ ಎಸೆದಳು…
ಪ್ರತ್ಯುತ್ತರವಾಗಿ ಗೌರಿ, “ನಾನು ತುಂಬಾ ಚೆನ್ನಾಗಿದೀನಿ ಅನು. ನಾನು ಬೆಂಗಳೂರಲ್ಲೇ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡ್ತಾ ಇದೀನಿ.ನೀನು ಸಾಫ್ಟ್‌ವೇರ್ ಇಂಜಿನಿಯರ್ ಆಗಿದಿಯಾ ಅಂತ ಗೋತಾಯ್ತು. ತುಂಬಾ ಸಂತೋಷವಾಯ್ತು. ಹ!!! ಇವನು ನನ್ನ ಮಗ ಸಿದ್ದಾಂತ.ಈಗ ಬೇಸಿಗೆ ರಜೆಯಲ್ಲವೇ ಅದಕ್ಕಾಗಿ ಇವನನ್ನು ಕರೆದುಕೊಂಡು ತವರು ಮನೆಗೆ ಹೊರಟಿದ್ದೀನಿ…”

ಹೀಗೆ ಸಂಭಾಷಣೆ, ಉಭಯ ಕುಶಲೋಪರಿ ಮುಂದುವರೆಯುತ್ತಿರಬೇಕಾದರೆ ಹೊರಟ ವೋಲ್ವೋ ಬಸ್ ನ ಹಾರ್ನ್ ಕೇಳಿ ಎಚ್ಚೆತ್ತುಕೊಂಡ ಅನು,” ಹೇ ಗೌರಿ ನನಗೆ ತಡವಾಗುತ್ತಿದೆ,ಮೀಟಿಂಗ್ ಬೇರೆ ಇದೆ,ಮನೆಗೆ ತಪ್ಪದೆ ಬಾ,ಮತ್ತೊಮ್ಮೆ ಸಿಗೋಣ,ಹ್ಯಾಪೀ ಜರ್ನೀ” ಎಂದು ಹೇಳಿ ಎಲೆಕ್ಟ್ರಾನಿಕ್ ಸಿಟೀ ಬುಸ್ ಹತ್ತಿದಳು.

ಅವಸರದಲ್ಲಿದ್ದ ಅನುಗೆ ವಿದಾಯ ಹೇಳಿ ಗೌರಿ-ಸಿದ್ದಾಂತ ಕೆಂಪೇಗೌಡ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕಿದರು…

ಕನ್ನಡ ಕಾಮನಬಿಲ್ಲು 101.3 ಕಂಪನಾಂಕಗಳಲ್ಲಿ ಮೂಡಿ ಬರುತ್ತಿದ್ದ ಇಂಪಾದ ಕನ್ನಡ ಹಾಡುಗಳು ಸಹ ಅಂದೇಕೋ ಅನುಪಮಳ ಮನಸ್ಸಿಗೆ ಸಂತೋಷ ಕೊಡುತ್ತಿರಲಿಲ್ಲ.ಏನೋ ಕಳೆದುಕೊಂಡಿದ್ದೇನೆ ಎಂಬ ಭಾವ ಆಕೆಯನ್ನು ಆವರಿಸಿಕೊಂಡಿತ್ತು. ಕಣ್ಣು ಮುಚ್ಚಿದವಳಿಗೆ ತನ್ನ ಬಾಲ್ಯದ ಬೇಸಿಗೆ ರಜೆಯ ಸ್ಮೃತಿಯಾಯಿತು….

 

vinay 2

ಅಜ್ಜನ ಮನೆ!!! ಅದೊಂದು ಸ್ವರ್ಗವೇ ಸರಿ; ಬೇಸಿಗೆ ರಜೆ ಬಂದಿತೆಂದರೆ ಅಲ್ಲೊಂದು ಪುಟ್ಟ ವಾನರ ಸೇನೆಯೇ ಇರುತಿತ್ತು.
ಪ್ರತಿನಿತ್ಯ ಹೆಂಡೆ ನೀರಿನ ಅಭ್ಯಂಜನ,ಅಜ್ಜಿಯ ಕೈಯ ರುಚಿಯಾದ ತಿಂಡಿ ತಿನಿಸುಗಳು…
ಎಲ್ಲರೂ ಸೇರಿ,ಊಟ ಕಟ್ಟಿಕೊಂಡು, ತಾತನ ಜೊತೆ ಎತ್ತಿನ ಬಂಡಿಯನ್ನು ಏರಿ ಹೊಲಕ್ಕೆ ಹೋಗುತ್ತಿದ್ದದ್ದು,
ಎಲ್ಲರೂ ಒಂದೊಂದು ಹಸುವಿನ ಕುತ್ತಿಗೆ ಕಟ್ಟಿದ್ದ ಹಗವನ್ನು ಹಿಡಿದು ಅದನ್ನು ನೀರು ಕುಡಿಸಲು ಕರೆದುಕೊಂಡು ಹೋಗುತ್ತಿದ್ದದ್ದು,
“ತಾತ ದೊಡ್ಡವಳಾದ ಮೇಲೆ ಈ ಹಸುವಿನ ಕೊರಳಿಗೊಂದು ಗಂಟೆ ಕೊಡಿಸುತ್ತೇನೆ” ಎಂದು ಹೇಳಿದ ಮಾತು,
ಅಜ್ಜ ನೀರು ಕಟ್ಟ ಬೇಕಾದರೆ ಎಲ್ಲ ಸೇರಿ ಡ್ಯಾಮ್ ನಿರ್ಮಿಸಿದ್ದು, ಅಜ್ಜ ಕರೆದೊಡನೆ ಚಂಗನೆ ಹಾರಿ ಬಂದ ಆ ಮುದ್ದಾದ ಹಸುವಿನ ಕರು, ತಾತ ಹಾಲು ಕರೆಯುತ್ತಿದ್ದ ದೃಶ್ಯ,ಎಲ್ಲ ಅನುಪಮಾ ಸ್ಮೃತಿಯನ್ನು ಆವರಿಸಿದ್ದವು…

ಎಲ್ಲ ಮೊಮ್ಮಕ್ಕಳನ್ನು ಕೂರಿಸಿಕೊಂಡು ಹುಣ್ಣಿಮೆಯ ಬಾನಂಗಳದಲ್ಲಿ ಅಜ್ಜಿ ಹಾಕುತ್ತಿದ್ದ ಆ ಕೈ ತುತ್ತು,ಹೇಳುತ್ತಿದ್ದ ಸುಂದರ ಕಥೆಗಳು,ಎಲ್ಲ ಒಟ್ಟಿಗೆ ಅಂಗಳದಲ್ಲೇ ಮಲಗುತ್ತಿದ್ದ ದೃಶ್ಯ,ಮಾವಿನ ಹಣ್ಣಿನ ಕಾಲವಾಗುತ್ತಿದ್ದರಿಂದ ಹಳ್ಳಿಯ ಸಮೀಪವೇ ಇದ್ದ ದೇವಾಲಯಕ್ಕೆ ಹೋಗಿ ಅಲ್ಲೇ ಮಲಗೆದ್ದು ಹೋಳಿಗೆ ಸೀಕರಣೆಯ ಎಡೆ ಹಾಕಿಸುತ್ತಿದ್ದದ್ದು,ಅಮ್ಮನೊಂದಿಗೆ ಇಡುತಿದ್ದ ಸಂಡಿಗೆ, ಉದ್ದುತ್ತಿದ್ದ ಹಪ್ಪಳ, ಜೆಡೀ ಮಣ್ಣಿನಲ್ಲಿ ಮಾಡುತ್ತಿದ್ದ ಗೊಂಬೆಗಳು,ಸೈಕಲ್ ಕಲೆತದ್ದು,ಈಜು ಕಲೆತದ್ದು,ಆಡುತ್ತಿದ್ದ ಕಣ್ಣಾ ಮುಚ್ಚಾಲೆ,ಕಳ್ಳ ಪೋಲೀಸ್,ಕುಂಟೋ ಬಿಲ್ಲೆ ಎಲ್ಲವನ್ನೂ ನೆನೆಯುತ್ತಿರುವಾಗಲೇ ಎಲೆಕ್ಟ್ರಾನಿಕ್ ಸಿಟೀ ಬಂದೆ ಬಿಟ್ಟಿತು.

ಮೀಟಿಂಗ್‌ನಲ್ಲಿದ್ದರೂ ಅನುಪಮಾಳ ಮನಸ್ಸು ಮಾತ್ರ ಹಳಿಯಲ್ಲೇ ವಿಹರಿಸುತ್ತಿತ್ತು.
ಕಳೆದ ವಾರವಷ್ಟೇ ತನ್ನ ಮಗ ವಿಕಾಸಾನನ್ನು ಸಮ್ಮರ್ ಕ್ಯಾಂಪ್ ಗೆ ಸೇರಿಸಿದ್ದೇನೆ ಎಂದು ಹೆಮ್ಮೆಯಿಂದ ಬೀಗಿದ್ದ ತಾಯಿ ಹೃದಯ ಇಂದು ತನ್ನ ಮಗನ ಮುಗ್ದ ಬಾಲ್ಯವನ್ನು ತಾನೇ ಕಸಿದುಕೊಳುತ್ತಿದೆಣೆಯೇ ಎಂದು ಮರಗುತ್ತಿತ್ತು.
ತಾನು ಸಹ ಗೌರಿಯ ಹಾಗೆ ಮಗನನ್ನು ಅಜ್ಜಿಯ ಮನೆಗೆ ಕರೆದುಕೊಂಡು ಹೋಗಬೇಕೆಂಬ ಆಶಯದಿಂದ ಅದಿನೈದು ದಿನಗಳ ರಜೆ ಕೇಳಿದಳು. ಪ್ರಾಜೆಕ್ಟ್ ಡೆಡ್‌ಲೈನ್ ಕಾರಣದಿಂದಾಗಿ ರಜೆ ತಿರಸ್ಕೃತವಾಯಿತು.

ಆದರೇನಂತೆ, ನಾನು ಅನುಭವಿಸಿದ ಬಾಲ್ಯದ ಆ ಸವಿ ನನ್ನ ಮಗನಿಗೂ ಲಭಿಸಬೇಕೆಂದು ಯೋಚಿಸಿ, ಮನೆಗೆ ಹೋದವಳೇ ತನ್ನ ತಾಯಿಗೆ ಕರೆ ಮಾಡಿದಳು.
“ಅಮ್ಮ ನಾಳೆ ಬೆಳಿಗ್ಗೆ ವಿಕಾಸನನ್ನು ಬಸ್ನಲ್ಲಿ ಕೂರಿಸುತ್ತೆನೆ;ಬಸ್ ನಿಲ್ದಾಣಕ್ಕೆ ಹೋಗಿ ಅವನನ್ನು ಕರೆದುಕೊಂಡು ಬರಲು ಅಪ್ಪನಿಗೆ ತಿಳಿಸು” ಎಂದು ಹೇಳಿದಳು.
ಸಮ್ಮರ್ ಕ್ಯಾಂಪ್ ಗೆ ಕಟ್ಟಿದ ಹಣ ಹೋದರೋಯಿತು ಎಂದು ಒಂದು ಪುಟ್ಟ ಬ್ಯಾಗಿಗೆ ಮಗನ ಬಟ್ಟೆಗಳನ್ನು ಇಟ್ಟು ತಯಾರು ಮಾಡಿದಳು…

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..