4022

ತುಳುನಾಡಿನ ಆಟಿ (ಆಷಾಡ ಮಾಸ) ಆಚರಣೆಯ ಮಹತ್ವ

deekshithದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ
ಕನ್ನಡದ ಜನತೆ ಶ್ರಾವಣ ಮಾಸ ಆಚರಿಸುವ ಹೊತ್ತಲ್ಲಿ ತುಳುನಾಡಿನ ಜನ ಪ್ರಕೃತಿಯ ಬದಲಾವಣೆಗೆ ಅನುಗುಣವಾಗಿ ಆಟಿ ಅಂದರೆ ಆಷಾಡ ಮಾಸವನ್ನು ಆಚರಿಸುತ್ತಾರೆ .ಸಾಮಾನ್ಯವಾಗಿ ಆಷಾಡ ಮಾಸದಲ್ಲಿ ಶುಭಕಾರ್ಯಗಳು ನಡೆಯುವುದಿಲ್ಲ .ಮದುವೆ ,ಗೃಹಪ್ರವೇಶ ,ಉಪನಯನ ಇತ್ಯಾದಿ ಅದೇ ರೀತಿ ಜಾತ್ರೆ ,ಕೋಲಗಳ ಅಬ್ಬರವೂ ಇರುವುದಿಲ್ಲ .ಇದಕ್ಕೆ ಮುಖ್ಯ ಕಾರಣವೇನೆಂದರೆ ತುಳುನಾಡಿನ
ಜನ ದೇವರಿಗಿಂತಲೂ ಹೆಚ್ಚಾಗಿ ಭೂತ ದೈವಗಳ ಆರಾಧಕರು ಈ ತಿಂಗಳಿನಲ್ಲಿ ದೈವಗಳು ಘಟ್ಟ ಹತ್ತುತ್ತವೆ ಎಂಬ ತಲೆತಲಾಂತರದ ನಂಬಿಕೆ .

ಭೂತ ದೈವಗಳನ್ನು ಧನಾತ್ಮಕ ಶಕ್ತಿಯ ಪ್ರತಿರೂಪವನ್ನಾಗಿ ಕಾಣುವುದರಿಂದ, ಈ ಆಷಾಡ(ಆಟಿ) ಮಾಸದಲ್ಲಿ ದೈವಗಳ ಕಾರಣಿಕ ಕಡಿಮೆ ಎಂಬ ನುಡಿಗಟ್ಟಿನ ಅನುಸಾರವಾಗಿ , ಋಣಾತ್ಮಕ ಅಥವಾ ಅತಿಮಾನುಷ ಶಕ್ತಿಗಳ ಪ್ರಭಾವ ಹೆಚ್ಚಾಗಿರುವುದು ಎಂಬ ನಂಬಿಕೆ ಅದೇ ರೀತಿ ಮಳೆಗಾಲ ಸ್ವಲ್ಪ ಬಿಡುವುಗೊಂಡು ನೀರು ಅಲ್ಲಲ್ಲಿ ನಿಂತು ಕ್ರಿಮಿಕೀಟಗಳ ಉತ್ಪತ್ತಿಯಾಗಿ ಸಾಂಕ್ರಮಿಕ ರೋಗ ಹರಡುವ ಸಮಯ ಎಂದು ನಂಬಲಾಗುತ್ತೆ ಇದೇ ಕಾರಣದಿಂದ ಆಟಿ ಅಮಾವಾಸ್ಯೆಯ ದಿನದಂದು ಮುಂಜಾನೆ ಎದ್ದು ಹಾಲೆ (ಪಾಲೆ ) ಮರದ ಕೆತ್ತೆ (ತೊಗಟೆ )ಯನ್ನು ಕಲ್ಲಿನಿಂದ ಜಜ್ಜಿ ತೆಗೆದು ಕಷಾಯ ಮಾಡಿ ತುಳುನಾಡಿನ ಜನರು ಕುಡಿಯುತ್ತಾರೆ ಅದೇ ರೀತಿ ಗದ್ದೆಗಳಲ್ಲಿ ಕಹಿ ಸಸ್ಯವನ್ನೂ ನೆಡಲಾಗುತ್ತೆ .

ಸಾಮಾನ್ಯವಾಗಿ ಈ ತಿಂಗಳಿನಲ್ಲಿ ನವ ವಿವಾಹಿತ ದಂಪತಿಗಳು ವಿರಹ ವೇದನೆಯನ್ನು ಅನುಭವಿಸುವ ಸಮಯ . ಈ ತಿಂಗಳು ಋಣಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗಿರುವುದರಿಂದ ದಂಪತಿಗಳು ಮಿಲನ ಹೊಂದಿ ಗರ್ಭ ಧರಿಸಿದರೆಜನಿಸುವ ಮಗುವಿನ ಆರೋಗ್ಯಕ್ಕೆ ತೊಂದರೆಯಾಗುವುದರಿಂದ ನವ ವಿವಾಹಿತ ಹೆಣ್ಣನ್ನು ತವರು ಮನೆಗೆ ಕಳುಹಿಸಿಕೊಡುವ ಸಂಪ್ರದಾಯವಿದೆ.

ಆಟಿ ತಿಂಗಳ ಇನ್ನೊಂದು ವಿಶೇಷವೆಂದರೆ ಆಟಿ ಕಳೆಂಜ , ಕಳೆನ್ಜವೆಂದರೆ ಕಷ್ಟವನ್ನು ಕಳೆವವನು ಎಂದರ್ಥ . ಈ ತಿಂಗಳಲ್ಲಿ ದೈವಗಳ ಆರಾಧನೆಯಿಲ್ಲದಿದ್ದರೂ ಮಾರಿ ಕಳೆಯುವ ಆಟಿ ಕಳೆಂಜ ಅಲ್ಲಲ್ಲಿ ಕಾಣಸಿಗುತ್ತಾನೆ .ಅಡಿಕೆ ಮರದ ಹಾಳೆಯ ಟೋಪಿ , ತೆಂಗಿನ ಮರದ ಹಸಿ ಗರಿ , ಕೆಂಪು ಬಣ್ಣದ ಅಂಗಿ ಧರಿಸಿ ಹಾಗೂ ಗೆಜ್ಜೆ ಕಟ್ಟಿ ಡೋಲು ಪಾಡ್ದನ (ಜನಪದ ) ಹಾಡನ್ನು ಹಾಡುತ್ತಾ ಮನೆ ಮನೆಗೆ ಬರುತ್ತಾನೆ ಹೀಗೆ ಬಂದವರಿಗೆ ತೆಂಗಿನಕಾಯಿ , ಅಡಿಕೆ-ವೀಳ್ಯ ಅಕ್ಕಿ ಕೊಟ್ಟು ಬೀಳ್ಕೊಡಲಾಗುತ್ತೆ. ಸಾಮಾನ್ಯವಾಗಿ ಭೂತ ಕೊಲಗಳಲ್ಲಿ , ತಮ್ಮ ವೃತ್ತಿಯನ್ನು ಮಾಡುತ್ತಿರುವ ಮಂದಿ ಆಷಾಡ ತಿಂಗಳಲ್ಲಿ ಪರ್ಯಾಯ ವ್ರತ್ತಿಯಾಗಿಯೂ ಇದನ್ನು ಮಾಡುತ್ತಾರೆ .ಹೀಗೆ ಕಳೆನ್ಜನಾಗಿ ಬರುವವರಲ್ಲಿ ನಾಟಿ ವಿದ್ಯೆ ಪರಿಣತರೂ ಆಗಿರುತ್ತಾರೆ ಹಾಗಾಗಿ ಅವರಿಂದ ಕಡಿಮೆ ಬೆಲೆಗೆ ಔಷಧವನ್ನು ಪಡೆಯುವಲ್ಲಿ ಬಡ ಜನರಿಗೆ ಅನುಕೂಲವಾಗುತ್ತೆ .ಇನ್ನು ಆಷಾಡ ತಿಂಗಳಿನ ವ್ಯಾವಹಾರಿಕ ಹಿನ್ನೆಲೆಯಲ್ಲಿ ನೋಡಿದಾಗ ವರ್ಷ ಪೂರ್ತಿ ಪೂಜಾ ಕೈಂಕರ್ಯಗಳಲ್ಲಿ ನಿರತರಾಗಿರುವ ಅರ್ಚಕರು , ಅಡುಗೆ ತಯಾರಕರು , ಚಪ್ಪರ ನಿರ್ಮಾಣಗಾರರು ಹಾಗೂ ಶುಭ ಕಾರ್ಯ ನಿಮಿತ್ತ ಕಾರ್ಯನಿರ್ವಹಿಸುವ ಎಲ್ಲ ವ್ರತ್ತಿಯವರಿಗೆ ವಿಶ್ರಾಂತಿ ಸಿಗುವ ಕಾಲ .

ಒಟ್ಟಿನಲ್ಲಿ ತುಳುನಾಡಿನ ಆಟಿ ಆಚರಣೆ ಸಾಂಸ್ಕ್ರತಿಕ ,ಧಾರ್ಮಿಕ ನಂಬಿಕೆ ಉಳಿಸುವಲ್ಲಿ ಹಾಗೂ ವ್ಯಾವಹಾರಿಕ ಅನುಕೂಲತೆಯನ್ನು ಮಾಡಿಕೊಡುವಲ್ಲಿ ಸಹಕಾರಿಯಾಗಿದೆ .ಇದೇ ಆಚರಣೆಯನ್ನು ಈಗ ಸಂಘ ಸಂಸ್ಥೆಗಳ ಮೂಲಕ ” ಆಟಿ ದೊಂಜಿ ಕೂಟ ” ಅನ್ನೋ ಕಾರ್ಯಕ್ರಮದ ಮೂಲಕ ಆಚರಿಸಲಾಗುತ್ತೆ . ವಿವಿಧ ಬಗೆಯ ಕಡುಬುಗಳು , ತಿಂಡಿ , ಕೆಸರು ಗದ್ದೆ ಆಟಗಳು ಹೀಗೆ ಹತ್ತು ಹಲವು ವೈವಿಧ್ಯಗಳ ಮೂಲಕ ನಡೆಸಲಾಗುತ್ತೆ .ಇವನ್ನೆಲ್ಲಾ ನೋಡಬೇಕೆಂದರೆ ಅವಿಭಜಿತ ದಕ್ಷಿಣ ಕನ್ನಡಕ್ಕೊಮ್ಮೆ ಭೇಟಿ ಕೊಡಿ .

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..