1955

ಧರ್ಮಛತ್ರದ ಧರ್ಮಚಿತ್ರ

s
ಅಂಕಣ :ಅಕ್ಷಯ್ ಕಿಣಿ

ಬಿಕ್ಷುಕನಂತೆ ಕಾಣುವ ಹರಕು ಬಟ್ಟೆ ತೊಟ್ಟು ಹೆಗಲಿಗೊಂದು ಜೋಳಿಗೆ ತಗಲಿಸಿಕೊಂಡವನೊಬ್ಬ ರಾಜಧಾನಿಗೆ ಬಂದ. ಅಲ್ಲಿ ಅವನಿಗೆ ರಾಜನ ಅರಮನೆ ಕಂಡಿತು. ಒಳಗೆ ಕಾಲಿಟ್ಟ. ಕೂಡಲೇ ರಾಜಭಟರು ಅವನನ್ನು ಬಂಧಿಸಿ ರಾಜನ ಮುಂದೆ ಕರೆತಂದರು.
“ಯಾರಯ್ಯ ನೀನು? ಅರಮನೆಯಲ್ಲೇನು ಕೆಲಸ?” ಎಂದು ರಾಜ ಕೇಳಿದ.
“ನಾನೊಬ್ಬ ಅಲೆಮಾರಿ. ಅಲ್ಲಲ್ಲಿ ಅಲೆಯುತ್ತಾ ಇಲ್ಲಿಗೆ ಬಂದೆ. ರಾತ್ರಿ ಕಳೆಯೋಣವೆಂದು ಒಳಗೆ ಬಂದೆ.” ಎಂದ.
“ಅಯ್ಯೋ ಮೂರ್ಖ, ರಾತ್ರಿ ಕಳೆಯಲು ಇದೇನು ಧರ್ಮಛತ್ರವೇ? ಇದು ಅರಮನೆ” ಎಂದು ರಾಜ ಸಿಟ್ಟಿನಿಂದ ಆರ್ಭಟಿಸಿದ.
“ಅರಮನೆಯೇ? ನೀವು ಬರುವ ಮೊದಲು ಇಲ್ಲಿ ಯಾರಿದ್ದರು?”
“ನನ್ನ ತಂದೆ.”
“ಅವರಿಗಿಂತ ಮೊದಲು?”
“ನನ್ನ ತಾತ.”
“ಅವರಿಗಿಂತಲೂ ಮೊದಲು?”
ರಾಜ ಅಸಹನೆಯಿಂದ ಹೇಳಿದ, “ ನನ್ನ ಮುತ್ತಾತ..”
“ಅಂದರೆ ಅವರೆಲ್ಲ ಮಲಗಿ ಎದ್ದು ಹೋದ ಜಾಗ ಇದು. ನಾವು ಇದನ್ನು ಧರ್ಮಛತ್ರ ಎನ್ನುತ್ತೇವೆ. ನೀವಿದನ್ನು ಅರಮನೆ ಎನ್ನುತ್ತಿರಿ..” ಎಂದ ಆ ಅಲೆಮಾರಿ.
ರಾಜ ಮೌನಿಯಾದ..

ಹೌದು..! ಲೋಕವೆಂಬ ಧರ್ಮಛತ್ರದಲ್ಲಿ ವಾಸಮಾಡುವ ನಾವೆಲ್ಲರೂ ಆ ಅರಮನೆಯ ರಾಜನಂತೆ ವರ್ತಿಸುತ್ತಿದ್ದೇವೆಯೇ ಹೊರತು ಆ ಅಲೆಮಾರಿ ಬಿಕ್ಷುಕನಂತಲ್ಲ. ನೀರಿನ ಗುಳ್ಳೆಗಳಾದ ನಾವು ಗುಳ್ಳೆ ನರಿಗಳ ಹಾಗೆ ಬದುಕುತ್ತಿದ್ದೇವೆಯೇ ಹೊರತು ಒಳ್ಳೆ ನರಗಳಂತಲ್ಲ. ಒಂದೊಮ್ಮೆ ಮನುಷ್ಯನೆಂಬ ಚರಜೀವಿಯು ಚಿರಂಜೀವಿಯೇನಾದರು ಆಗಿದ್ದಿದ್ದರೆ ಲೋಕದಲ್ಲಿ ಸರ್ವರದ್ದು ಒಂದೊಂದು ಅರಮನೆಗಳಿರುತ್ತಿದ್ದವೋ ಎನೋ..! ಯಾರ ಅಪ್ಪಣೆಯನ್ನೂ ಪಡೆಯದೇ ಈ ಲೋಕಕ್ಕೆ ಬಂದ ನಾವುಗಳೆಲ್ಲರೂ ಭೂಮಿಯೆಂಬ ಧರ್ಮಛತ್ರದ ನಿವಾಸಿಗಳಷ್ಟೇ. ಧರ್ಮಛತ್ರದ ಆವಾಸಿಗಳಿಗೆ ಅಲ್ಲಿ ವಾಸಿಸುವ ಹಕ್ಕು ಇರುವುದು ವಾಸಿ. ಆದರೆ ವಾಸ್ತವದಲ್ಲಿ ಅವರದನ್ನು ಆಧಿಕಾರ ಎಂದು ತಿಳಿದು ವರ್ತಿಸುವ ಅವರ ಖಯಾಲಿಯು ಖಾಯಿಲೆಯಲ್ಲದೇ ಮತ್ತೇನು?

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..