1764

ತುಪ್ಪದ ಬಿಂದಿಗೆ ತಿಪ್ಪೆಯ ಮೇಲೆ..

s
ಅಂಕಣ :ಅಕ್ಷಯ್ ಕಿಣಿ

ಅದೊಂದು ಕಾಳರಾತ್ರಿ. ಚೋರರ ಕೈಯಲ್ಲಿನ ಕೊಡಲಿ ಮರ ಕಡಿಯುತ್ತಿತ್ತು. ಅದು ಗಂಧದ ಮರ. ಗಂಧದ ಮರವಾಗಿರುವುದರಿಂದಲೇ ಅಂದು ಅದಕ್ಕೆ ಸಾವಿನ ಯೋಗ.! ಮರ ದೊಪ್ಪನೆ ಬಿತ್ತು. ಕಡಿದು ವಾಹನಕ್ಕೆ ತುಂಬಿಸಿದರು ಕಳ್ಳರು. ಕೊಡಲಿಯಲ್ಲಿ ಮರ ಕಡಿದ ಸೂಚನೆ ಇರಬಾರದೆಂಬ ಕಾರಣಕ್ಕಾಗಿ ಅದನ್ನು ನೀರಿನಿಂದ ಚೆನ್ನಾಗಿ ತೊಳೆದರು. ತೊಳೆದ ಮೇಲೊಮ್ಮೆ ಮೂಸಿ ನೋಡಿದರು. ಕೊಡಲಿಯ ಬಾಯಿ ಇನ್ನೂ ಸುಗಂಧವನ್ನು ಸೂಸುತ್ತಿತ್ತು. ತನ್ನನ್ನು ಕಡಿದ ಕೊಡಲಿಯ ಬಾಯಿಗೂ ಒಂದಿಷ್ಟು ಪರಿಮಳವನ್ನುಣಿಸಿತ್ತು ಆ ಗಂಧದ ಮರ..
ಜಗತ್ತು ಇರೋದು ಹೀಗೆ ಅಲ್ವೇ..? ಬೆಲೆ ಇರೊದು ಜಾಸ್ತಿ ಕಾಲ ಇರೊಲ್ಲ.. ಬೆಲೆ ಬಾಳೋರು ಜಾಸ್ತಿ ಕಾಲ ಬದುಕೊಲ್ಲ. ಅದಕ್ಕೇ ತಾನೆ ದಾಸರು ಹೇಳಿರುವುದು..

“ ಧರ್ಮಕ್ಕೆ ಕೈ ಬಾರದೀ ಕಾಲ..
ಪಾಪಕರ್ಮಕ್ಕೆ ಮನಸೋಲೊದೀ ಕಾಲ.”

ಆದರೆ ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಅಂತಾರಲ್ಲ ಹಾಗೆ ಕೆಲವರು ತಮ್ಮ ಸಾವಿನಲ್ಲಿ ಇತರರಿಗೆ ಒಂದಿಷ್ಟು ಸುಖವನ್ನು ಬಿಟ್ಟು ಸಾರ್ಥಕರಾಗುತ್ತಾರೆ. ಆದರೆ ಆ ಸಾರ್ಥಕತೆಯೇ ಇತರರ ಸ್ವಾರ್ಥಕಥೆಗಳೆಗೆ ಮುನ್ನುಡಿಯಾಗುತ್ತದೆ ನೋಡಿ ಅದೇ ವಿಪರ್ಯಾಸ.. ಜೇನಿನ ಸಾವೇ ಸವಿಜೇನು ಸವಿಯಲು ನಾಂದಿ ಅಲ್ಲವೇ?. ಸಜ್ಜನರ ಸಂಗವೇ ಹಾಗೆ..ದೊರೆಯುವುದು ಮಾತ್ರ ವಿರಳ ಅಷ್ಟೇ. ಗಂಧದ ಹಾಗೇ.. ಬೆಲೆಯ ಸಂಖ್ಯೆ ಜಾಸ್ತಿ ಸಂಖ್ಯಾಬಲ ಮಾತ್ರ ಕಡಿಮೆ.. ಸಜ್ಜನರೊಡೆ ದುರ್ಜನರಿದ್ದೊಡೆ ಸಜ್ಜನರ ವಡೆ..(ವಧೆ) ಖಚಿತ.. ದುರ್ಜನರಿಗೆ ಆ ವಡೆ ರುಚಿಯುಣಿಬಹುದು ಅದೇ ಸಜ್ಜನರ ದೊಡ್ಡಸ್ತಿಕೆ. ತಿಪ್ಪೆಯ ಮೇಲೆ ದೊಪ್ಪನೆ ಬಿದ್ದ ತುಪ್ಪದ ಬಿಂದಿಗೆ ತಿಪ್ಪೆಯ ವಾಸನೆಯನ್ನು ಅಳಿಸಿ ಪರಿಮಳವನ್ನೀಯುವುದಿಲ್ಲವೇ ಹಾಗೆ ಸಜ್ಜನರ ದೇಹತ್ವ ನಶಿಸಬಹುದು ದೇವತ್ವ ಮಾತ್ರ ಎಂದಿಗೂ ನಶಿಸದು..

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..